ಮುಳ್ಳೂರು
ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಒಂದು ಗ್ರಾಮ. ಶನಿವಾರ ಸಂತೆಯಿಂದ ದಕ್ಷಿಣಕ್ಕೆ ಸುಮಾರು 6 ಕಿಮೀ ದೂರದಲ್ಲಿದೆ. ಗಂಗರ ಮತ್ತು ಚಂಗಾಳ್ವರ ಕಾಲದಲ್ಲಿ ಪ್ರಾಮುಖ್ಯ ಪಡೆದಿದ್ದ ಈ ಊರಿನಲ್ಲಿ ಆ ಕಾಲದ ಜೈನಬಸದಿಗಳಿವೆ. ಇವು ಈಗ ಜೀರ್ಣಾವಸ್ಥೆಯಲ್ಲಿವೆ. 1058ರ ಒಂದು ಶಾಸನದಲ್ಲಿ ರಾಜೇಂದ್ರ ಚೋಳ ಪೃಥ್ವೀಕೊಂಗುಣಿ ಎಂಬಾತ ತನ್ನ ತಾಯಿ ಪೊಂಬಚ್ಚರಸಿಯ ಸ್ಮಾರಕವಾಗಿ ತನ್ನ ತಂದೆ 1050ರಲ್ಲಿ ನಿರ್ಮಿಸಿದ್ದ ಬಸದಿಯೊಂದಕ್ಕೆ ಕೆಲವು ಗ್ರಾಮಗಳನ್ನೂ ಎಣ್ಣೆಯನ್ನೂ ದಾನವಿತ್ತ ಉಲ್ಲೇಖವಿದೆ. ಇದು ಮುಳ್ಳೂರಿಗೆ ಸಂಬಂಧಿಸಿದ್ದಿರಬೇಕು. ಚಂಗ್ವಾಳರ ಕೊನೆಯ ಸಂತತಿಯ ಶಾಸನವೊಂದರಲ್ಲಿ (1280, 1296, 1300ರ ಸಮಯ) ಮಲ್ಲಿದೇವನೆಂಬ ಚಂಗಾಳ್ವ ರಾಜ ಮತ್ತು ಅವನ ಮಗ ಹರಿಹರದೇವರು ತಮ್ಮ ಪ್ರಜೆಗಳಿಗೆ ಭೂಮಿ, ಧನ ಇತ್ಯಾದಿಗಳನ್ನು ದಾನ ಕೊಟ್ಟ ಸ್ಥಳ ಮುಳ್ಳೂರೆಂದು ಉಲ್ಲೇಖಿತವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ